ಪಾತಾಳ ವೆಂಕಟರಮಣ ಭಟ್ಟರಿಗೆ ದೋಗ್ರ ಪೂಜಾರಿ ಪ್ರಶಸ್ತಿ
ಲೇಖಕರು : ಎಲ್. ಎನ್. ಭಟ್ ಮಳಿಯ
ಮ೦ಗಳವಾರ, ಜುಲೈ 21 , 2015
|
ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ಟರಿಗೆ ಈ ವರ್ಷದ ದೋಗ್ರ ಪೂಜಾರಿ ಪ್ರಶಸ್ತಿ ಜುಲೈ 19ರಂದು ಮಂಗಳೂರು ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನವಾಯಿತು.
|
ಪುತ್ತೂರು ತಾಲೂಕು ಬೈಪದವು ರಾಮಭಟ್ ಮತ್ತು ಹೇಮಾವತಿ ಅಮ್ಮ ಅವರ ಮಗನಾಗಿ 1933ರಲ್ಲಿ ವೆಂಕಟರಮಣ ಭಟ್ಟರ ಜನನ. 8ನೇ ತರಗತಿಯವರೆಗೆ ವಿದ್ಯಾಭ್ಯಾಸ. ಪುತ್ತೂರು ಕೃಷ್ಣ ಭಟ್, ಮಾಣಂಗಾಯಿ ಕೃಷ್ಣ ಭಟ್ ಇವರಿಂದ ತೆಂಕು ತಿಟ್ಟು ನಾಟ್ಯಾಭ್ಯಾಸ. ಮಂಗಳೂರಿನ ವಿಠಲ್ ಮಾಸ್ಟರ್ ಅವರಿಂದ ಭರತನಾಟ್ಯ ಅಧ್ಯಯನ. ಕೃಷ್ಣ ಅಯ್ಯರ್ ಅವರಿಂದಲೂ ನೃತ್ಯ ತರಬೇತಿ ಪಡೆದರು. 16ನೆಯ ವಯಸ್ಸಿಗೆ ಕಾಂಚನ ಮೇಳದಲ್ಲಿ ತಿರುಗಾಟ ಆರಂಭ. ಮೂಲ್ಕಿ, ಸೌಕೂರು, ಸುರತ್ಕಲ್, ಧರ್ಮಸ್ಥಳ ಮೇಳಗಳಲ್ಲಿ ಕಲಾ ವ್ಯವಸಾಯ.
18 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ಕಲಾಸೇವೆ
ದ್ರೌಪದಿ, ಊರ್ವಶಿ, ಮೇನಕೆ, ಮೋಹಿನಿ, ಪ್ರಮೀಳೆ, ಧರ್ಮರಾಯ, ಶ್ರೀರಾಮ, ವಿಷ್ಣು, ಅತಿಕಾಯ ಹೀಗೆ ವೈವಿಧ್ಯಮಯ ವೇಷಗಳನ್ನು ಶ್ರದ್ಧೆಯಿಂದ ಮಾಡಿದ ಪಾತಾಳರು ಅಧ್ಯಯನಶೀಲ ರಂಗಕರ್ಮಿ. 18 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ಸ್ತ್ರೀಪಾತ್ರಧಾರಿಯಾಗಿ ಒಳ್ಳೆಯ ಹೆಸರು ಗಳಿಸಿದ ಪಾತಾಳರನ್ನು ಸಹ ಕಲಾವಿದರು, ಪ್ರೇಕ್ಷಕರು, ಸಂಯೋಜಕರು ಮೆಚ್ಚಿಕೊಳ್ಳುತ್ತಾರೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ "ಅಮ್ಮು ದೇವಿ' ಪಾತಾಳರಿಗೆ ವಿಶೇಷ ಪ್ರಸಿದ್ಧಿ ತಂದುಕೊಟ್ಟಿತು.
ಮೂರು ದಶಕಗಳಿಗೂ ಅಧಿಕ ಕಲಾಸೇವೆ, ಬೇಡಿಕೆಯಲ್ಲಿದ್ದಾಗಲೇ ನಿವೃತ್ತಿ. ಆ ಬಳಿಕ ಸ್ತ್ರೀ ಪಾತ್ರದ ಬಗ್ಗೆ ಸಂಶೋಧನೆಯನ್ನು ಮುಂದುವರಿಸುತ್ತಾ ಆಗಾಗ್ಗೆ ಯಕ್ಷಗಾನ ಪ್ರಾತ್ಯಕ್ಷಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡರು. ಹೆಜ್ಜೆಗಾರಿಕೆ, ಪುರುಷವೇಷಕ್ಕೆ ಸಂವಾದಿಯಾಗಿ ಸ್ತ್ರೀ ವೇಷ ವಸ್ತ್ರವಿನ್ಯಾಸ, ಬಣ್ಣಗಾರಿಕೆ ಮುಂತಾದ ವಿಷಯಗಳಲ್ಲಿ ಪಾತಾಳರು ಆಳ ಚಿಂತನೆ ನಡೆಸಿದರು. ಉಡುಪಿ, ಎಂಜಿಎಂ ಕಾಲೇಜಿನಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡರು. ಮಂಗಳೂರಿನಲ್ಲಿ ವಿದ್ಯಾ ಕೋಳ್ಯೂರು ಅವರು ಸಂಯೋಜಿಸಿದ ಪ್ರಾತ್ಯಕ್ಷಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ಮಲ್ಪೆ ಶಂಕರ ನಾರಾಯಣ ಸಾಮಗರ ವಿಶ್ವಾಮಿತ್ರನ ಪಾತ್ರಕ್ಕೆ ಮೇನಕೆಯಾಗಿ ಪಾತ್ರ ನಿರ್ವಹಿಸಿ ಯಶಸ್ವೀ ಕಲಾವಿದ ಎನಿಸಿಕೊಂಡ ಪಾತಾಳರು ಒಳ್ಳೆಯ ಸಾಧಕರು. ಶೇಣಿ ಗೋಪಾಲಕೃಷ್ಣ ಭಟ್ಟರ ಸುಧನ್ವ ಮತ್ತು ಪಾತಾಳರ ಪ್ರಭಾವತಿ ಆ ಕಾಲದ ಪ್ರೇಕ್ಷಕರ ಮೆಚ್ಚಿನ ಕಲಾ ಜೋಡಿಯಾಗಿತ್ತು. ಕುರಿಯ ವಿಠಲ ಶಾಸ್ತ್ರಿ ಅವರೊಂದಿಗೂ ಕೆಲವು ಪ್ರದರ್ಶನಗಳಿಗೆ ಭಾಗವಹಿಸಿದ ಪಾತಾಳರು ಹೊಂದಾಣಿಕೆಯ ಕಲಾವಿದ.
ಅಧ್ಯಯನ ಶೀಲ
ಡಿವಿಜಿಯವರ "ಅಂತಃಪುರ ಗೀತೆ' ಪುಸ್ತಕವನ್ನು ಅಧ್ಯಯನ ಮಾಡಿ ಅದರಿಂದ ಯಕ್ಷಗಾನದ ಸ್ತ್ರೀಪಾತ್ರಕ್ಕೆ ಬೇಕಾದ ಅಂಶಗಳನ್ನು ಆಯ್ದುಕೊಂಡರು. ಬೇಲೂರು ಶಿಲಾ ಬಾಲಿಕೆ ಶಿಲ್ಪಗಳ ನಿಲುವು, ಆಹಾರ್ಯಗಳನ್ನು ಯಕ್ಷಗಾನ ಸ್ತ್ರೀವೇಷಕ್ಕೆ ಅಳವಡಿಸಿದ ಸಾಧಕ. ಅಭಿಮಾನಿಗಳು ಪಾತಾಳರನ್ನು ಯಕ್ಷಗಾನದ ನಾಗಕನ್ನಿಕೆ ಎಂದು ಶ್ಲಾಘಿಸುತ್ತಾರೆ.
|
ಪಾತಾಳ ವೆಂಕಟರಮಣ ಭಟ್ |
|
ಜನನ |
: |
1933 |
ಜನನ ಸ್ಥಳ |
: |
ಪಾತಾಳ, ಪುತ್ತೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಮೂರು ದಶಕಗಳ ಕಾಲ ಅಪ್ರತಿಮ ಸ್ತ್ರೀ ವೇಷಧಾರಿಯಾಗಿ ತೆ೦ಕು - ಬಡಗು ತಿಟ್ಟುಗಳಲ್ಲಿ ಕಲಾಸೇವೆ
|
ಪ್ರಶಸ್ತಿ, ಪುರಸ್ಕಾರಗಳು :
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ಯಕ್ಷಗಾನ ಅಕಾಡೆಮಿ ಪ್ರಶಸ್ತಿ
- ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ
- ವಿಟ್ಲ ಗೋಪಾಲಕೃಷ್ಣ ಭಟ್ ಪ್ರತಿಷ್ಟಾನ ಪ್ರಶಸ್ತಿ
- ಫ಼ಲಿಮಾರು ಮಠದ ವಿದ್ಯಾಮಾನ್ಯ ಪ್ರಶಸ್ತಿ
- ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನಗಳು
|
|
|
"ಯಕ್ಷ ಶಾಂತಲಾ' ಅಭಿನಂದನಾ ಗ್ರಂಥ ಮುಳಿಯ ಶಂಕರ ಭಟ್ ಮತ್ತು ನಾ. ಕಾರಂತ ಪೆರಾಜೆ ಅವರಿಂದ ರಚಿತವಾಗಿ ಕಲಾಭಿಮಾನಿಗಳಿಂದ ಪ್ರಶಂಶಿಸಲ್ಪಟ್ಟಿದೆ. ಸಂಗ್ರಹಯೋಗ್ಯ ಪುಸ್ತಕವಿದು.
ಪ್ರಶಸ್ತಿ, ಗೌರವಗಳು
ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಎಡನೀರು ಮಠಾಧೀಶರಿಂದ ಗೌರವ. ಪೇಜಾವರ, ಪಲಿಮಾರು ಶ್ರೀಗಳಿಂದ ಗೌರವ ದೊರೆತಿದೆ. ಹೀಗೆ ಪಾತಾಳರ ಸಮ್ಮಾನ ಸಂಪುಟ ವಿಸ್ತಾರವಾಗಿದೆ. ನಿತ್ಯ ಅನುಷ್ಠಾನ, ಸಾತ್ವಿಕ ವ್ಯಕ್ತಿತ್ವ ಪಾತಾಳರ ವಿಶೇಷತೆ. ತೆಂಕು-ಬಡಗು ಉಭಯ ತಿಟ್ಟುಗಳಲ್ಲಿ ಚೆನ್ನಾಗಿ ವೇಷ ಮಾಡಿದ ಪಾತಾಳರು ಗಮನೀಯ ಸಾಧಕ.
ಪತ್ನಿ ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಒಳಗೊಂಡ ಪಾತಾಳರದು ಸಮೃದ್ಧ ಕಲಾ ಕುಟುಂಬ. ಅವರ ಪುತ್ರ ಅಂಬಾ ಪ್ರಸಾದ ಪಾತಾಳರು ಈಗ ಯಶಸ್ವೀ ಸ್ತ್ರೀ ಪಾತ್ರಧಾರಿ.
***************
ಪಾತಾಳ ವೆಂಕಟರಮಣ ಭಟ್'ರವರ ಕೆಲವು ಛಾಯಾ ಚಿತ್ರಗಳು
( ಕೃಪೆ : ಅ೦ತರ್ಜಾಲದ ಯಕ್ಷಗಾನಾಭಿಮಾನಿಗಳು )
ಕೃಪೆ :
udayavani
|
|
|